ಏನು ಸುಕೃತವ ಮಾಡಿದಳೊ ಯಶೊದೆ vadirajaru

 

  Restart mobile & try if the above audio is not playing

ಶ್ರೀ ಶ್ರೀ ವಾದಿರಾಜರ ಕೃತಿ 

ರಾಗ :ಕಾಪಿ   ಆದಿತಾಳ 


ಏನು ಸುಕೃತವ ಮಾಡಿದಳೊ ಯಶೊದೆ ||ಪ||

ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿ ಮುದ್ದಿಪಳಂತೆ ||ಅ ಪ||


ಗಂಗಾಜನಕಗೆ ಗಡಿಗೆ ನೀರನೆರೆವಳಂತೆ |

ಮಂಗಳಾಂಗಗೆ ಭಾಮೆ ಶೃಂಗರಿಪಳಂತೆ ||

ತುಂಗ ಭೂಧರನ ತೊಟ್ಟಿಲೊಳು ಮಲಗಿಪಳಂತೆ |

ಕಂಗಳಿಗಗೋಚರನ ಎತ್ತಿ ಮುದ್ದಿಪಳಂತೆ ||೧||


ಚತುರಾಸ್ಯನ ಪಿತನ ಸುತನೆಂದೆತ್ತುವಳಂತೆ |

ಶೃತಿವಿನುತನಿಗೆ ಜೋಗುಳವ ಪಾಡುವಳಂತೆ ||

ಶತರವಿತೇಜಗಾರತಿಯನೆತ್ತುವಳಂತೆ |

ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ ||೨||


ಜಗವನೆತ್ತಿದವನ ಮಗುವೆಂದೆತ್ತುವ

ನಿಗಮಗೋಚರನ ಈಕ್ಷಿಸುವಳಂತೆ ||

ಅಗಣಿತ ಸದ್ಗುಣನ ಹಗ್ಗದಿ ಕಟ್ಟುವಳಂತೆ |

ಮಿಗೆ ನಿತ್ಯತೃಪ್ತನಿಗೆ ಪಾಲನೆರೆವಳಂತೆ ||೩||


ಬಹುಮುಖನಿಗೆ ಭಾಮೆ ಮುದ್ದನೀಡುವಳಂತೆ |

ಅಹಿತಲ್ಪನಿಗೆ ಹಾವತುಳಿದಿಯೆಂಬುವವಳಂತೆ |

ಬಹುದೈತ್ಯ ಸಂಹರಗೆ ಭಯವ ತೋರುವಳಂತೆ |

ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ ||೪||


ಕಡಗೋಲ ನೇಣನು ಕೈಯೊಳಗೆ ಪಿಡಿದು |

ಪಾಲ್ಗಡಲೊಡೆಯ ದ್ವಾರಕಾನಿಲಯ ||

ಬಿಡದೆ ಸಲಹುವ ಹಯವದನ ಮೋಹನ ಮುದ್ದು |

ಉಡುಪಿಯ ಕೃಷ್ಣನ್ನ ಉಡಿಯೊಳೆತ್ತುವಳಂತೆ ||೫||

***

Comments