ಚಿತ್ತಜನಯ್ಯನ ಚಿಂತಿಸು ಮನವೇ sripadarajaru chittajanayyana chintisu manave


Restart mobile & try if the above audio is not playing

ಶ್ರೀಶ್ರೀಪಾದರಾಜರು

ರಾಗ : ತೋಡಿ   ತಾಳ : ಆದಿ


ಚಿತ್ತಜನಯ್ಯನ ಚಿಂತಿಸು ಮನವೇ

ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ||


ಕಾಲನ ದೂತರು ನೂಲು ಹಗ್ಗವ ತಂದು

ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ

ಕಾಲಪಾಶದೊಳಿಟ್ಟು ಶೂಲದಿಂದಿರುವಾಗ

ಪಾಲಿಸುವರುಂಟೆ ಜಾಲವ ಮಾಡದೆ ||೧||


ದಂಡಧರನ ಭಟರು ಚಂಡಕೋಪದಿ ಬಂದು

ಕೆಂಡದ ನದಿಯ ತಡೆಗೆ ಕೊಂಡೊಯ್ದು

ಖಂಡಖಂಡವ ಕಿತ್ತು ಕೆಂಡದೊಳಿಡುವಾಗ

ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨||


ಅಂಗಗಳಿಗೆ ಡಬ್ಬಣಂಗಳ ಸೇರಿಸಿ ಎರಡು

ಕಂಗಳಿಗೆ ಸೀಸವ ಕಾಸಿ ಪೊಯ್ಯಲು

ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ

ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||

**

Comments