ವರದೇಂದ್ರಗುರು ನಿಮ್ಮ ಚರಿಯ ಗುಣವೂ gurugopala dasaru varadendra guru nimma chariya
Restart mobile & try if the above audio is not playing
ಶ್ರೀ ಶ್ರೀ ಗುರುಗೋಪಾಲದಾಸರ ವಿರಚಿತ ಶ್ರೀವರದೇಂದ್ರತೀರ್ಥರ ಸ್ತೋತ್ರಪದ
gurugopaladasaru 1723-1764 (Dasappa) b/o Gopala dasa
ರಾಗ : ಹಂಸಾನಂದಿ ಆದಿತಾಳ
ವರದೇಂದ್ರಗುರು ನಿಮ್ಮ ಚರಿಯ ಗುಣವೂ ।
ಧರೆಯೊಳಗೆ ಪರಿಪರಿ ಆಶ್ಚರ್ಯಾಯಿತು ನೋಡೆ ॥ ಪ ॥
ದಿನದಿನಕೆ ಅತಿಶಯವಿತರಣ ಗುಣವಧಿಕವಾಗೆ ।
ಅನಿಮಿಷಾದ್ರಿ ಸವೆದು ಸರಿಯಲಾಗಿ॥
ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।
ಘನ ಹರುಷದಲಿ ಕುಣಿದು ಕುಣಿದು ನಲಿದಾಡುವದು ॥ 1 ॥
ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।
ಉದಿಸಿ ಅಂಬರ ಮಧ್ಯದಲಿ ನಿಂತು ॥
ಮುದನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।
ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ ॥ 2 ॥
ತಾನೇ ಜಗಕೆಲ್ಲ ಒಬ್ಬನೆ ಗುರುವೆನಿಸಿದ । ಗೀರ್ವಾಣರಾಚಾರ್ಯನಿರಲು ಈಗ ॥
ಕ್ಷೋಣಿಯೊಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।
ತಾನಿಲ್ಲದೆಲೆ ನಾಕವಾಸಮಾಡಿದ ಮುದದಿ ॥ 3 ॥
ಕುಂಡಲೀಶನು ಸಕಲ ಭುವನದೊಳಗೆ ತಾನೆ ।
ಪಂಡಿತನೆಂದು ಒಪ್ಪಲು ಈಗ ಭೂ - ॥
ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।
ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದನೋ ॥ 4 ॥
ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।
ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ॥
ಎರಡು ಕಂಗಳು ಸಾಲದೆಂದು ಹರುಷದಲಿ ।
ಸಾವಿರನಯನ ಧರಿಸಿ ನೀಕ್ಷಿಸುತಿಹ್ಯ ಬೆರಗಾಗಿ ॥ 5 ॥
ಆವ ಜನುಮದ ಸುಕೃತ ಫಲಿಸಿತೋ ಎನಗಿಂದು ।
ಆವ ಹಿರಿಯರು ವೊಲಿದು ಕರುಣಿಸಿದರೋ ॥
ಕೋವಿದಾಗ್ರಣಿ ಹರುಷದಿ ಎನ್ನ ನೋಡಲು ।
ಕೇವಲ ಧನ್ಯನಾದೆನು ಇವರ ಕರುಣದಲಿ ॥ 6 ॥
ಗುರುಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯೆರವುತಾ॥
ಮರುತ ಗುರುಗೋಪಾಲವಿಠ್ಠಲ ರಾಮವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯೆರೆವಿ ॥ 7 ॥
****
ಲಘುಟಿಪ್ಪಣಿ
ವರದೇಂದ್ರಗುರು ನಿಮ್ಮ ಚರಿಯ ಗುಣವೂ ।
ಧರೆಯೊಳಗೆ ಪರಿಪರಿ ಆಶ್ಚರ್ಯಾಯಿತು ನೋಡೆ ।। ಪ ।।
ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು ಶ್ರೀರಾಯರ ಮಠದ ಪೀಠವನ್ನು ಆಳಿದವರು. ಶ್ರೀಗೋಪಾಲದಾಸರು ಹಾಗೂ ಅವರ ಸಹೋದರರೂ ಇವರ ಸಮಕಾಲೀನರು. ಶ್ರೀಗಳವರ ಜಗದ್ಗುರುತ್ವ , ದಾನಶೌಂಡತ್ವ , ಪರಮತ ನಿರಾಕರಣಪೂರ್ವಕ ಶ್ರೀಮನ್ಮಧ್ವಮತಸಂಸ್ಥಾಪಕತ್ವ , ಶಿಷ್ಯಪೋಷಕತ್ವ , ರಾಮ-ವ್ಯಾಸಚರಣಾರ್ಚಕತೆಯ ವೈಭವಾದಿ ಗುಣಗಳನ್ನು ಪ್ರತ್ಯಕ್ಷವಾಗಿ ನೋಡಿ , ಸಂತೋಷ-ಸಂಭ್ರಮಗಳನ್ನು ಹೊಂದಿದ ಶ್ರೀಮಠದ ಶಿಷ್ಯರೂ ಆದ ಶ್ರೀಗುರುಗೋಪಾಲದಾಸರು ಅವರನ್ನು ದರ್ಶನ ಮಾಡಿದಾಗ ಮೈ-ಮನಗಳು ಉಬ್ಬಿ ಮಾಡಿದ ಸ್ತೋತ್ರವಿದು.
ದಿನದಿನಕೆ ಅತಿಶಯ ವಿತರಣ ಗುಣವಧಿಕವಾಗೆ ।
ಅನಿಮಿಷಾದ್ರಿ ಸವೆದು ಸರಿಯಲಾಗಿ।
ದಿನಕರಗೆ ಮರೆಪೋಪದೆಂದು ಚಕ್ರವಾಕ ದ್ವಿಜ ।
ಘನ ಹರುಷದಲಿ ಕುಣಿದು ಕುಣಿದು ನಲಿದಾಡುವದು ।। ೧ ।।
ಶ್ರೀಗಳವರು ಸತ್ಪಾತ್ರರಲ್ಲಿ ಮಾಡಿದ ಸುವರ್ಣಾದಿ ದಾನಗಳು ಎಷ್ಟು ಅಧಿಕವಾಯಿತೆಂದರೆ - ಬಂಗಾರದ ಪರ್ವತವಾದ ಮೇರುಪರ್ವತವೂ ಅವರ ನಿರಂತರ ಸುವರ್ಣದಾನದಿಂದ ಕರಗಿಹೋಯಿತು. ಮೇರುವಿನ ಸುತ್ತಲೂ ರಥದಲ್ಲಿ ಕುಳಿತು ಸೂರ್ಯನು ಸಂಚರಿಸುತ್ತಿರುವಾಗ ಈವರೆವಿಗೆ , ಮೇರುಪರ್ವತ ಸೂರ್ಯನಿಗೆ ಮರೆಯಾಗಿತ್ತು. ಆದ್ದರಿಂದಲೇ ದಿನವೊಂದರಲ್ಲಿ ಲೋಕದಲ್ಲಿ ಅರ್ಧಭಾಗಕ್ಕೆ ಹಗಲು ಅರ್ಧಭಾಗಕ್ಕೆ ರಾತ್ರಿಗಳೆಂಬ ವ್ಯವಸ್ಥೆ ಇದ್ದು ಚಕ್ರವಾಕಪಕ್ಷಿಗೆ ರಾತ್ರಿಯಲ್ಲಿ ಸೂರ್ಯನ ವಿರಹ ಉಂಟಾಗಿ ದುಃಖವಾಗುತ್ತಿದ್ದು ಈಗ ಆ ಮೇರು ಶ್ರೀಗಳವರ ನಿರಂತರ ದಾನಕಾರ್ಯದಿಂದ ಸವೆದು ಸರಿದಿದ್ದರಿಂದ ಸೂರ್ಯ ಸಂಚಾರದಿಂದ ಉಂಟಾಗುತ್ತಿದ್ದ ಬೆಳಕಿಗೆ - ಸೂರ್ಯದರ್ಶನಾದಿಗಳಿಗೆ ಅಡ್ಡಿ (ಯಾಗಿದ್ದ ಮೇರು ಕರಗಿ ಸರಿದಿದ್ದರಿಂದ) ನಿವಾರಣೆಯಾಗಿ ನಿರಂತರ ಸೂರ್ಯ ಸಂಚಾರ - ದರ್ಶನಾದಿಗಳು ಆಗುವಂತೆ ಆಯಿತು. ಇದರಿಂದ ಚಕ್ರವಾಕಪಕ್ಷಿಗೆ ಆನಂದವಾಗಿ , ಅದು ವಿಶೇಷಹರ್ಷದಿಂದ ಕುಣಿಕುಣಿದು ನಲಿದಾಡಿತಂತೆ !
ಹದಿನಾರು ಕಳೆಗಳಿಂದುಕ್ಕುವ ಉಡುರಾಜ ।
ಉದಿಸಿ ಅಂಬರ ಮಧ್ಯದಲಿ ನಿಂತು ।
ಮುದ ನಿಧಿಯೆ ನಿಮ್ಮ ರೂಪವ ನೋಡಿ ಲಜ್ಜೆಯಲಿ ।
ಬುಧನ ಪ್ರಚಿಂತೆಯಲಿ ದಿನದಿನಕೆ ಅಣುವಾದ।। ೨ ।।
ತನ್ನ ದರ್ಶನಮಾತ್ರದಿಂದ ಜನರಿಗೆ ಆಹ್ಲಾದಕರವಾದ ಚಂದ್ರನು , ತನ್ನ ಮಗನಾದ ಬುಧನ ಸೌಂದರ್ಯ - ಲಕ್ಷಣಗಳನ್ನು ನೋಡಿ ಈವರೆವಿಗೆ ಅವನಿಗೆ ಸಮರಾದ ರೂಪವಂತರು ಇಲ್ಲವೆಂದೇ ಹಿಗ್ಗುತ್ತಿದ್ದ. ಆದರೆ ಶ್ರೀಗಳವರ ರೂಪಲಾವಣ್ಯಗಳ ಮುಂದೆ ಬುಧನ ಸೌಂದರ್ಯ ತೀರ ಕಡಿಮೆ ಎನಿಸಿದ್ದರಿಂದ ಮಗನಿಗಾದ ಈ ತೆರಹದ ಪರಿಸ್ಥಿತಿಯನ್ನು ನೋಡಿ ಲಜ್ಜೆಯಾಗಿ - ಮಗನಿಗೆ ಈ ರೀತಿ ಸೋಲು ಉಂಟಾಗಿದ್ದುದರಿಂದ ಚಿಂತೆಯಲ್ಲಿ (ಕೃಷ್ಣಪಕ್ಷದಲ್ಲಿ) ದಿನದಿನಕ್ಕೆ ಕ್ಷಯಿಸಲು ಪ್ರಾರಂಭಿಸಿದನಂತೆ !
ತಾನೇ ಜಗಕೆಲ್ಲ ಒಬ್ಬನೆ ಗುರುವೆನಿಸಿದ ।
ಗೀರ್ವಾಣರಾಚಾರ್ಯನಿರಲು ಈಗ ।
ಕ್ಷೋಣಿಯೊಳು ನಿಮ್ಮ ಗುರುತ್ವದ ಮಹಿಮೆಯ ಕಂಡು ।
ತಾ ನಿಲ್ಲದೆಲೆ ನಾಕ ವಾಸ ಮಾಡಿದ ಮುದದಿ ।। ೩ ।।
ಬೃಹಸ್ಪತ್ಯಾಚಾರ್ಯರು ಈವರೆವಿಗೆ ದೇವತೆಗಳಿಗೆ ಗುರುವೆನಿಸಿ ತನ್ನ ಸಮಾನರಾದ ಗುರುಗಳೇ ಇಲ್ಲವೆನ್ನುತ್ತಿದ್ದರು. ಆದರೆ ಈಗ ಶ್ರೀವರದೇಂದ್ರರ ' ಗುರುತ್ವ ' ಮಹಿಮೆಯನ್ನು ಕಂಡು ಭೂಮಂಡಲದಲ್ಲಿ ತನ್ನ ಗುರುತ್ವಕ್ಕೆ ಪ್ರಾಶಸ್ತ್ಯವಿಲ್ಲವಾಯಿತು ಎಂದು ಚಿಂತಿಸಿ ಸ್ವರ್ಗದಲ್ಲೇ ವಾಸಮಾಡಿದನಂತೆ !
ಕುಂಡಲೀಶನು ಸಕಲ ಭುವನದೊಳಗೆ ತಾನೆ ।
ಪಂಡಿತನೆಂದು ಒಪ್ಪಲು ಈಗ ಭೂ - ।
ಮಂಡಲದಲ್ಲಿ ನಿಮ್ಮ ಪ್ರವಚನಾದಿಗಳನ್ನು ।
ಕಂಡು ತಲೆವಾಗಿ ಕ್ಷೋಣಿಯವೊಳಕೆ ಸೇರಿದೆನೋ।। ೪ ।।
ಕುಂಡಲೀಶ = ಸರ್ಪಗಳಿಗೆ ಸ್ವಾಮಿಯಾದ ಶೇಷದೇವನು ಸಹಸ್ರವದನನಾದ ತಾನೇ ಪಂಡಿತನೆಂದು ಈವರೆವಿಗೆ ಭುವನದಲ್ಲಿ ವೊಪ್ಪಿದ್ದ - ಈಗ ಆತ ಭೂಮಂಡಲದಲ್ಲಿ ಶ್ರೀವರದೇಂದ್ರರ ಪ್ರವಚನಾದಿಗಳನ್ನು ಕಂಡು , ತಲೆಬಾಗಿ ಭೂಮಂಡಲದ ಕೆಳಗೆ ಪಾತಾಳವಾಸಿಯಾದ !
ಸುರರಾಜ ತ್ರಿಭುವನೈಶ್ವರ್ಯದಿಂದೊಪ್ಪುತಲಿ ।
ಧರೆಯೊಳು ನಿಮ್ಮ ಸಾಮ್ರಾಜ್ಯ ಕಂಡು ।
ಎರಡು ಕಂಗಳು ಸಾಲದೆಂದು ಹರುಷದಲಿ ।
ಸಾವಿರ ನಯನ ಧರಿಸಿ ವೀಕ್ಷಿಸುತಿಹ್ಯ ಬೆರಗಾಗಿ ।। ೫ ।।
ಸ್ವರ್ಗಾಧಿಪತಿಯಾದ ಇಂದ್ರದೇವರು ತ್ರಿಭುವನದಲ್ಲಿ ಎಲ್ಲರಿಗೂ ಹೆಚ್ಚಿಗೆ ಐಶ್ವರ್ಯವಂತನೆನಿಸಿದ್ದವರು - ಶ್ರೀವರದೇಂದ್ರಸ್ವಾಮಿಗಳವರ ಸಾಮ್ರಾಜ್ಯದ (ವೇದಾಂತ ಹಾಗೂ ಸಾರಸ್ವತ) ಸಿರಿಯನ್ನು ಕಂಡು , ಈ ಐಶ್ವರ್ಯದ ವೈಭವಾದಿಗಳನ್ನು ನೋಡಲು ತನ್ನ ಎರಡು ಕಂಗಳು ಸಾಲದೆಂದು ತಾನು ಸಾವಿರನಯನಗಳನ್ನು ಧರಿಸಿ ಈಕ್ಷಿಸುತ್ತಾ ಬೆರಗಾಗಿದ್ದಾರೆ !
ಆವ ಜನುಮದ ಸುಕೃತ ಫಲಿಸಿತೋ ಎನಗಿಂದು ।
ಆವ ಹಿರಿಯರು ವೊಲಿದು ಕರುಣಿಸಿದರೋ ।
ಕೋವಿದಾಗ್ರಣಿ ಹರುಷದಿ ಎನ್ನ ನೋಡಲು ।
ಕೇವಲ ಧನ್ಯನಾದೆನು ಇವರ ಕರುಣದಲಿ ।। ೬ ।।
ಗುರುಕರುಣ ಬಲದಲ್ಲಿ ಅರಿಕರಿನಿಕರದೊಳಗೆ ।
ಹರಿಯಾಕ್ಷನೆನಿಸಿ ಧರೆಯಲಿ ಮ್ಯರೆಯುತ ।
ಮರುತ ಗುರುಗೋಪಾಲವಿಠ್ಠಲ ರಾಮ ವ್ಯಾಸರ ।
ಚರಣಾರ್ಚನೆಯ ಬಲದಿ ನಿರುತ ಸುಖದಲಿ ಮ್ಯರೆವಿ।। ೭ ।।
ಶ್ರೀ ಶ್ರೀಪಾದಂಗಳವರು - ವಿಷ್ಣು - ವೈಷ್ಣವರ ಶತ್ರುಗಳೆಂಬ ಆನೆಗಳ ಸಮೂಹ ಮಧ್ಯದಲ್ಲಿ (ಹರ್ಯಾಕ್ಷ = ಸಿಂಹ) ಅವರನ್ನು ಧ್ವಂಸಗೊಳಿಸಲು ಸಿಂಹದಂತೆ ವಿರಾಜಮಾನರಾಗಿರುವರು. ಇಂತಹವರ ದರ್ಶನ - ಉಪದೇಶ - ಸೇವಾದಿಗಳು ದೊರೆಯಲು ಹಿಂದಿನ ಜನ್ಮಗಳ ಪುಣ್ಯವೂ - ಜೊತೆಗೆ ಹಿರಿಯರು ಒಲಿದು ಕರುಣಿಸಿದ್ದು ಕಾರಣವೆಂದೂ , ಇದರಿಂದ ಹಾಗೂ ಶ್ರೀ ಶ್ರೀವರದೇಂದ್ರರ ಕೃಪಾಕಟಾಕ್ಷ ವೀಕ್ಷಣದಿಂದ ತಾವು ಧನ್ಯರಾದೆವೆಂದೂ ಶ್ರೀದಾಸರು ಹರ್ಷಿಸಿದ್ದಾರೆ.
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
**

Comments
Post a Comment